top of page

ನಾವು

ನಡೆದು ಬಂದ ದಾರಿ

ಮಾನವ ಸಹಜ ಸಾಮಾಜಿಕ ಬದ್ಧತೆಯ ಮೇರೆಗೆ ಒಬ್ಬೊಬ್ಬರೊಡಗೂಡಿ ಸಾಮಾಜಿಕ ಜವಾಬ್ದಾರಿಯ ಅರಿವು, ಕಳಕಳಿ, ಹೊಣೆಗಳನ್ನು ಚರ್ಚಿಸಿ ನಮ್ಮದೇ ಆದ ನೆಲೆಗಟ್ಟು ಪ್ರಾರಂಭಿಸುವ ಚಿಂತನೆಯಲ್ಲಿ ಮಿಂದೆದ್ದು ಕೊನೆಗೂ ಒಂದು ಚೌಕಟ್ಟು ನಿರ್ಮಿಸುವ ಕುರಿತಾದ ಪರಿಕಲ್ಪನೆಯ ಪ್ರಯತ್ನದ ಫಲಿತಾಂಶವಾಗಿ “ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ” 1989ರಲ್ಲಿ ಉದಯವಾಯಿತು. ಕರಾವಳಿ ಜಿಲ್ಲೆಗಳಿಂದ ಉದ್ಯೋಗ, ವ್ಯಾಪಾರ ವ್ಯವಹಾರಗಳ ನಿಮಿತ್ತ ಬೆಂಗಳೂರಿಗೆ ಬಂದು ನೆಲೆಸಿದ ಸುಮಾರು ನೂರರಷ್ಟು ಕುಟುಂಬಗಳು ಆ ಸಮಯದಲ್ಲಿದ್ದವು. ವಿವಿಧ ಕಾರಣಗಳಿಂದಾಗಿ ಸಮಾಜಕ್ಕೆ ಪ್ರಬಲ ಸಂಘಟನೆಯ ಅಗತ್ಯತೆ ಅರಿತುಕೊಂಡ ನಮ್ಮ ಅಂದಿನ ಯುವಕರು ಮತ್ತು ಹಿರಿಯರು ಸಮಾಜದ ಶ್ರೇಯೋಭಿವೃಧ್ದಿಗಾಗಿ ಈ ಸಂಸ್ಥೆಯ ಪ್ರಾರಂಭಕ್ಕೆ ಕಾರಣೀಭೂತರಾದರು. ಬೆಂಗಳೂರು ಮಹಾನಗರದಲ್ಲಿನ ಜೀವನ ನಿರ್ವಹಣೆಯ ತೊಡಕಿನಲ್ಲಿ ಪ್ರಗತಿಯ ಕಲ್ಪನೆ ಬಹುದೂರದ ಮಾತಾಗಿದ್ದ ದಿನಗಳಲ್ಲಿ ʼಶೆಟ್ಟಿಗಾರರʼ ಬದುಕು ವಿಕಾಸವಾಗಲು ಸ್ಥಿತಿಗತಿ ಉತ್ತಮವಾಗಿರಬೇಕೆಂಬುದನ್ನು ಅರಿತುಕೊಂಡ ಕೆಲವು ಸಮಾನ ಮನಸ್ಕರು ಉದ್ದೇಶಿತ ಸಮಾಜ ಸೇವಾಕಾರ್ಯಗಳಿಗಾಗಿ ಒಂದು ವೇದಿಕೆಯ ನಿರ್ಮಾಣಕ್ಕೆ ಮುಂದಾಗಿ, ಸಮಾಜ ಸೇವಾಸಕ್ತರೊಂದಿಗೆ ಸೇರಿ ಸಂಘಟನೆಯ ಕುರಿತಾದ ಪರಿಕಲ್ಪನೆಯನ್ನು ಸಮಾಜಸ್ಥರ ಮುಂದಿಟ್ಟರು. ಸಂಸ್ಥಾಪಕರುಗಳಲ್ಲಿನ ಆತ್ಮವಿಶ್ವಾಸ, ಪ್ರಯತ್ನ ಹಾಗೂ ಕ್ರಿಯಾಶೀಲತೆಗೆ ಬೆಂಬಲ ಮತ್ತು ಪ್ರೋತ್ಸಾಹ ದೊರೆತ ಕಾರಣ, ಸಂಘಟನೆಯು ನಿರ್ಧಾರಿತ ಹಂತವನ್ನು ತಲುಪುವಲ್ಲಿ ಯಶಸ್ವಿಯಾಯಿತು. ಅಂದಿನ ದಿನಗಳಲ್ಲಿನ ಶೆಟ್ಟಿಗಾರ ಸಮುದಾಯ ಎದುರಿಸುತ್ತಿರುವ ಹತ್ತಾರು ಸಮಸ್ಯೆಗಳನ್ನು ಆಧಾರವಾಗಿಟ್ಟುಕೊಂಡು ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕಕ್ಷೇತ್ರಗಳಲ್ಲಿ ಅಭಿವೃದ್ಧಿ ಸಾದಿಸಲು ಬಡ ಸಮಾಜಸ್ಥರಿಗೆ ತಮ್ಮ ಕೈಲಾದ ಸೇವೆ ಸಲ್ಲಿಸಲು, ಸಾಮಾಜಿಕ ಮತ್ತು ಶೈಕ್ಷಣಿಕ ಅರಿವು ಮೂಡಿಸಲು ಕ್ರಿಯಾ ಯೋಜನೆಗಳನ್ನು ರೂಪಿಸಿಕೊಂಡು ಸಮುದಾಯದ ಅಭಿವೃದ್ಧಿಗಾಗಿ ಕಾನೂನು ನಿಯಮಗಳಡಿಯಲ್ಲಿ ಬೈಲಾವನ್ನು ರಚಿಸಿಕೊಂಡು ದ.ಕ.ಪದ್ಮಶಾಲಿ ಸಮಾಜ ಸೇವಾಕೂಟವನ್ನು ನೋಂದಣಿ ಮಾಡುವ ಮೂಲಕ ಭವ್ಯ ಸಮಾಜದ ಅಭಿವೃಧ್ದಿಗೆ ನಾಂದಿ ಹಾಡಿದರು.

 

ದಿನಾಂಕ 19.06.1989ರ ಶುಭದಿನದಂದು ತಾತ್ಕಾಲಿಕ ಸಮಿತಿಯ ಅಸ್ತಿತ್ವಗೊಂಡು, 21.06.1989ರಂದು ಕಾನೂನು ನಿಯಮಗಳ ವ್ಯಾಪ್ತಿಯಲ್ಲಿ ಸಮಾಜಸ್ಥರ ಉಪಸ್ಥಿತಿಯಲ್ಲಿ ಪ್ರಥಮ ಸಭೆ ಜರಗುವ ಮೂಲಕ ಶುಭಾರಂಭಗೊಂಡು ಅಧಿಕೃತವಾಗಿ ಸಮಾಜಸೇವೆಗೆ ನಾಂದಿ ಹಾಡಿತು. ಉತ್ತಮ ಸಾಮಾಜಿಕ ಬದ್ದತೆಯುಳ್ಳ ಹಾಗೂ ಕಾರ್ಯತತ್ಪರತೆಯನ್ನು ಹೊಂದಿದ್ದ ಪ್ರಥಮ ಕಾರ್ಯಕಾರಿ ಸಮಿತಿಯು ಅಸ್ತಿತ್ವಕ್ಕೆ ಬಂತು. ಅಲ್ಲಿಂದ ಮೊದಲ್ಗೊಂಡು ಈವರೆಗೆ ದಕ್ಷ, ಆದರ್ಶಪ್ರಾಯ ಗೌರವ ಅಧ್ಯಕ್ಷರುಗಳ ನೇತೃತ್ವದಲ್ಲಿ ಸುಮಾರು 16 ಕಾರ್ಯಕಾರಿ ಸಮಿತಿಗಳು ವಿವಿಧ ಸಮಾಜ ಸೇವೆಗಳ ಮೂಲಕ ತಮ್ಮ ಸೇವಾಕೈಂಕರ್ಯವನ್ನು ಸುಲಲಿತವಾಗಿ ಸಲ್ಲಿಸುತ್ತಾ ಬಂದಿರುತ್ತವೆ. ಎಲ್ಲಾ ಕಾರ್ಯಕಾರಿ ಸಮಿತಿಯು ಸಾಮಾಜಿಕ ಸಂಘಟನೆಯಲ್ಲಿ ನಿರ್ವಹಿಸಲೇಬೇಕಾದ ಕಾರ್ಯಬಾಹುಳ್ಯವನ್ನು ಅರಿತು ಸಮಾಜ ಬಾಂಧವರೊಂದಿಗೆ ನಿಕಟ ಸಂಪರ್ಕ, ಸಹಕಾರ, ಸಹಾಯ ಹಾಗೂ ಸೌಹಾರ್ದತೆಯನ್ನು ಕಲ್ಪಿಸುವ ಜೊತೆಗೆ ಆರ್ಥಿಕ ಕ್ರೋಢೀಕರಣಕ್ಕೆ ಆದ್ಯತೆಯನ್ನು ನೀಡಲಾಯಿತು. ಹೀಗೆ ನಮ್ಮ ನೆಚ್ಚಿನ ಕೂಟವು ಸಂಪೂರ್ಣ ಸ್ವಾಯತ್ತತೆಯ ಶಕ್ತಿಕೇಂದ್ರವಾಗಿ ಮಾನ್ಯತೆ ಪಡೆಯಿತು.

 

ಕೂಟದ ಸದಸ್ಯರುಗಳು ಏರ್ಪಡಿಸುವ ಸಮಾರಂಭಗಳಲ್ಲಿ ಎಲ್ಲರೂ ಸೇರಿ ಆನಂದಿಸುವ ಹಾಗೂ ಕಷ್ಟ ಸಂಕಷ್ಟದ ಕ್ಲಿಷ್ಟ ಸಂದರ್ಭಗಳಲ್ಲಿ ಸಂಘವು ಸಕ್ರಿಯವಾಗಿ ಪಾಲ್ಗೊಳ್ಳುವ ಪರಿಪಾಠವು ಸಮಾಜಸ್ಥರ ಮೆಚ್ಚುಗೆಗೆ ಪಾತ್ರವಾಯಿತು. ಕುಟುಂಬಗಳಲ್ಲಿನ ಪ್ರಬುದ್ಧರೆಲ್ಲರೂ ಸದಸ್ಯತ್ವವನ್ನು ಹೊಂದುವ ಮತ್ತು ಆಜೀವ ಸದಸ್ಯತ್ವ ಪಡೆಯುವ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯುತ್ತಾ ಬಂದಿದೆ. ನಮ್ಮ ಸಮಾಜದವರಲ್ಲಿನ ನೊಂದ ಬಡಕುಟುಂಬಗಳಿಗೆ ತಮ್ಮ ಕೈಲಾದ ಆರ್ಥಿಕ ನೆರವಿನ ಸಹಾಯಹಸ್ತ ನೀಡಿ ಸಂತೈಸುವ ಕುರಿತಾದ ಚಿಂತನೆಯೊಂದಿಗೆ ಕೂಟದ ಪದಾಧಿಕಾರಿಗಳು, ಸದಸ್ಯರು ತಮ್ಮ ಹಾಗೂ ಉದಾರಿದಾನಿಗಳಿಂದ ಸಂಗ್ರಹಿಸಿದ ಹಣವನ್ನು ಸೂಕ್ತಫಲಾನುಭವಿ ಕುಟುಂಬಗಳಿಗೆ ವಿತರಿಸಿ ಸಾಂತ್ವನ ನೀಡುವ ಉದಾತ್ತ ಕ್ರಮವನ್ನು ಆರಂಭಿಸಿತು.

 

1992ರ ವಾರ್ಷಿಕ ಮಹಾಸಭೆಯಲ್ಲಿ ಪ್ರಥಮ ಬಾರಿಗೆ ಎಸ್.‌ ಎಸ್.‌ ಎಲ್.ಸಿ ವರೆಗಿನ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕ ಬಹುಮಾನವನ್ನು ನೀಡುವ ಸಂಪ್ರದಾಯವನ್ನು ಆರಂಭಿಸಲಾಯಿತು. ಪ್ರತಿ ವರ್ಷವೂ ಈ ಬಹುಮಾನದ ಮೊತ್ತವು ಹೆಚ್ಚಾಗುತ್ತಿರುವುದು ಸಂತೋಷಕರ ವಿಷಯವಾಗಿದೆ. ಅದರ ಜೊತೆಗೆ ವಿದ್ಯಾರ್ಥಿಗಳಿಗೆ ಹೆಚ್ಚಿನ ಉತ್ತೇಜನ ನೀಡುವ ನಿಟ್ಟಿನಲ್ಲಿ ಎಸ್‌.ಎಸ್.ಎಲ್.ಸಿ ಮತ್ತು ದ್ವಿತೀಯ ಪಿ.ಯು.ಸಿ/12ನೇ ತರಗತಿಯಲ್ಲಿ ಅತಿಹೆಚ್ಚಿನ ಅಂಕಗಳನ್ನು ಪಡೆದಿರುವ ವಿದ್ಯಾರ್ಥಿಗೆ ಪ್ರತಿ ವರ್ಷವೂ ಹಣದ ರೂಪದಲ್ಲಿ ದತ್ತಿ ಪ್ರಶಸ್ತಿಗಳನ್ನು ನಮ್ಮ ಸಮಾಜದ ಉದಾತ್ತ ಕೊಡುಗೈದಾನಿಗಳು ನೀಡುತ್ತಿರುವುದು ತುಂಬಾ ಅಭಿನಂದನೀಯವಾಗಿದೆ. ʼಶೈಕ್ಷಣಿಕ ಬೆಳವಣಿಗೆಯೇ ಎಲ್ಲಾ ರೀತಿಯ ಬೆಳವಣಿಗೆಗೆ ಮೂಲ ಶಕ್ತಿʼ ಎನ್ನುವಂತೆ ಸಮಾಜಸ್ಥರೆಲ್ಲರೂ ತಮ್ಮ ಮಕ್ಕಳನ್ನು ಯಾವುದೇ ಕಠಿಣ ಪರಿಸ್ಥಿತಿಯಲ್ಲಿಯೂ ಶಿಕ್ಷಣದಿಂದ ವಂಚಿತರಾಗಿಸಬಾರದೆಂದು ಕಟಿಬದ್ಧವಾಗಿ ನಿಂತಿರುವ ನಮ್ಮ ಕೂಟವು ಪಿ.ಯು.ಸಿ ಮತ್ತು ನಂತರದ ಎಲ್ಲಾ ಉನ್ನತ ವ್ಯಾಸಂಗಗಳಿಗೆ ಉತ್ತಮ ಮೊತ್ತದ ವಿದ್ಯಾರ್ಥಿವೇತನವನ್ನು ಪ್ರತಿವರ್ಷ ನೀಡುತ್ತಾ ಬರುತ್ತಿದೆ. 20.01.1992 ರಲ್ಲಿ ಸರಕಾರದ ನೆರವಿನೊಂದಿಗೆ ಗ್ರಂಥಾಲಯವು ಆರಂಭಗೊಂಡಿತು. ಅರ್ಹ ಬಡವಿದ್ಯಾರ್ಥಿಗಳಿಗೆ ಪುಸ್ತಕಗಳನ್ನು ಮತ್ತು ಹಣಕಾಸಿನ ನೆರವನ್ನು ನೀಡುವ ಕಾರ್ಯಕ್ರಮಗಳು ಬಹಳಷ್ಟು ವಿದ್ಯಾರ್ಥಿಗಳಿಗೆ ಅನುಕೂಲಮಾಡಿಕೊಟ್ಟಿತು.

 

2004ರಲ್ಲಿ ವೈದ್ಯಕೀಯ ನೆರವು ನಿಧಿಯು ಅಸ್ತಿತ್ವಗೊಂಡಿತು. ಆರ್ಥಿಕ ಸಂಕಷ್ಟದಲ್ಲಿರುವ ಸಮಾಜಸ್ಥರ ವೈದ್ಯಕೀಯ ಖರ್ಚುವೆಚ್ಚಗಳಿಗೆ ಈ ನಿಧಿಯಿಂದ ಹಣವನ್ನು ನೀಡಲಾಗುತ್ತಿದೆ. ಆರ್ಥಿಕ ಕೋಶದ ಅಭಿವೃದ್ದಿಗಾಗಿ ಯಕ್ಷಗಾನ ನಾಟಕ ಪ್ರದರ್ಶನಗಳನ್ನು ಏರ್ಪಡಿಸುವ ಮೂಲಕ ಧನಸಂಗ್ರಹಣೆಯ ಗುರಿ ಸಾಧನೆಗಾಗಿ ಕ್ರಿಯಾಶೀಲ ಸದಸ್ಯರು ಶ್ರಮಿಸಿಕೊಂಡು ಬಂದಿದ್ದಾರೆ. ಈ ಕುರಿತಾದ ಕಾರ್ಯಕ್ರಮಗಳಿಗೆ ಕೂಟವು ಸದಾಕಾಲವೂ ಆದ್ಯತೆಯನ್ನು ನೀಡುತ್ತದೆ.

 

ಕೂಟದ ಸದಸ್ಯರ ಮನೆಯಲ್ಲಿ ಜರಗುವ ಶುಭಸಮಾರಂಭಗಳಾದ ಗೃಹ ಪ್ರವೇಶ, ಮದುವೆ ಮುಂತಾದ ಶುಭ ಸಂದರ್ಭಗಳಲ್ಲಿ ತಮ್ಮ ಇಷ್ಟಾನುಸಾರ ಕೂಟಕ್ಕೆ ನೀಡಿದ ವಿಶೇಷ ದೇಣಿಗೆಯನ್ನು ಶುಭನಿಧಿಯಾಗಿ ಸಂಗ್ರಹಿಸಿ ಆರ್ಥಿಕ ಸಂಪನ್ಮೂಲಗಳನ್ನು ಕ್ರೋಡೀಕರಿಸಲು ಅನುವಾಯಿತು.

 

ತಮ್ಮದೇ ಆದ ಸ್ವಂತ ಕಟ್ಟಡ ಮತ್ತು ಮೂಲಭೂತ ಸೌಕರ್ಯಗಳನ್ನು ಒದಗಿಸಿಕೊಳ್ಳುವ ಚಿಂತನೆಯು ಆರಂಭದಿಂದಲೇ ಇದ್ದಿತ್ತು. 1994-95ರ ಸಾಲಿನಲ್ಲಿ ಸ್ವಂತ ನಿವೇಶನ ಖರೀದಿಮಾಡಲಾಯಿತು. ಕಟ್ಟಡ ನಿಧಿಗಾಗಿ ʼಸ್ಮರಣ ಸಂಚಿಕೆʼ ತರುವ ಮತ್ತು ದೇಣಿಗೆಯನ್ನು ಸಂಗ್ರಹಿಸುವ ಮಹತ್ತರ ಕಾರ್ಯವು ನಡೆಯುತ್ತಿತ್ತು. 2005-2007ನೇ ಸಾಲಿನಲ್ಲಿ ಕೂಟವು ಕಾರ್ಯನಿರ್ವಹಿಸಿಕೊಂಡು ಬರುತ್ತಿದ್ದ ಬಾಡಿಗೆ ಕಟ್ಟಡಕ್ಕೆ ಪರ್ಯಾಯವಾಗಿ ತನ್ನ ಕಛೇರಿಗಾಗಿ ಒಂದು ಸ್ವಂತ ಕಟ್ಟಡದ ಖರೀದಿ ಅಥವಾ ನಿರ್ಮಾಣ ಮಾಡುವ ಬಗ್ಗೆ ನಿರ್ಣಯ ಕೈಗೊಳ್ಳಲಾಯಿತು. ಅದುವರೆಗೆ ಕೂಟದಲ್ಲಿದ್ದ ಕಟ್ಟಡ ನಿಧಿಯೊಂದಿಗೆ ಸರ್ವಸದಸ್ಯರ ಅತೀ ಹೆಚ್ಚಿನ ಮನೆಗಳಿಂದ ಕಟ್ಟಡ ನಿರ್ಮಾಣದ ಬಗ್ಗೆ ಹೊಸದಾಗಿ ಸಂಗ್ರಹಿಸಿದ ಉದಾರ ದೇಣಿಗೆಯನ್ನು ಸೇರಿಸಿ ಕೂಟಕ್ಕೆ ಒಂದು ʼಸ್ವಂತ ಕಛೇರಿʼ ಕಟ್ಟಡದ ನಿರ್ಮಾಣವನ್ನು ಮಾಡಲಾಯಿತು. 19.06.2007 ರಂದು ಈ ಕಟ್ಟಡವನ್ನು ಸಮಾಜಸ್ಥರ ಸೇವೆಗಾಗಿ ಸಮರ್ಪಿಸಲಾಯಿತು. ಕೂಟದ ಕಛೇರಿಯ ಜೊತೆಗೆ ಇದೇ ಕಟ್ಟಡದಲ್ಲಿ ಕರಾವಳಿ ಭಾಗದಿಂದ ಬೆಂಗಳೂರಿಗೆ ಉನ್ನತ ವ್ಯಾಸಂಗಕ್ಕೆ ಮತ್ತು ಉದ್ಯೋಗವನ್ನರಿಸಿಕೊಂಡು ಬರುವ ಸಮಾಜದ ಬಡ ವಿದ್ಯಾರ್ಥಿಗಳಿಗೆ, ಯುವಕರಿಗೆ ತಂಗಲು ವಸತಿ ವ್ಯವಸ್ಥೆಯನ್ನು ಮಾಡಲಾಯಿತು.

 

ಬೆಂಗಳೂರು ವ್ಯಾಪ್ತಿಯ ಸದಸ್ಯರುಗಳ ವಿಳಾಸ ವಿವರಗಳನ್ನು ಹೊಂದಿರುವ ವಿಳಾಸ ಕೈಪಿಡಿಯು ಎರಡನೇ ವರ್ಷದ ಮಹಾಸಭೆಯಲ್ಲಿ ಕೊಡುಗೆಯಾಗಿ ಬಂತು. ಹೊಸ ಸದಸ್ಯರ ವಿಳಾಸಗಳನ್ನು ಸೇರ್ಪಡೆಗೊಳಿಸುವ ಕ್ರಮದ ಅನ್ವಯ ಸಕಾಲಿಕವಾಗಿ ವಿಳಾಸ ಕೈಪಿಡಿಗಳು ಪ್ರಕಟಗೊಳ್ಳುತ್ತಿವೆ.

 

2005-2007ರ ಸಾಲಿನಲ್ಲಿ ವಧೂವರರ ವೇದಿಕೆಯನ್ನು ಪ್ರಾರಂಭಿಸಿ ಮಧುರ ದಾಂಪತ್ಯದ ಅನ್ವೇಷಕರಿಗೆ ಸಹಕರಿಸುವ ಸೇವೆಯೂ ಆರಂಭಗೊಂಡಿತು.

 

ಪ್ರತೀ ವರ್ಷವೂ ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಕೂಟವು ನಡೆಸುತ್ತಾ ಬಂದಿದೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ ವಿವಿಧ ವಯೋಮಾನದವರಿಗೆ ಉಪಯುಕ್ತವಾಗುವ ವಿಚಾರ ಸಂಕಿರಣಗಳು, ವೈದ್ಯಕೀಯ ಅರಿವು ಮೂಡಿಸುವ ಕಾರ್ಯಕ್ರಮಗಳು, ಆರೋಗ್ಯ ಶಿಬಿರದ ಆಯೋಜನೆಗಳು ಸಮಾಜಸ್ಥರ ಪ್ರತಿಭೆಗಳನ್ನು ಹೊರತರಲು ಸಾಂಸ್ಕ್ರತಿಕ ಮತ್ತು ಕ್ರೀಡಾ ಸ್ಪರ್ಧೆಗಳು, ಪ್ರವಾಸಗಳನ್ನು ಆಯೋಜಿಸುವುದು. ಇವುಗಳ ಜೊತೆಗೆ ಸಾಹಿತ್ಯ, ಕ್ರೀಡೆ, ಕಲೆ, ಮತ್ತಿತರ ಕ್ಷೇತ್ರಗಳಲ್ಲಿ ರಾಜ್ಯ, ರಾಷ್ಟ್ರ, ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಶಸ್ತಿ ವಿಜೇತರಾದ ಪ್ರತಿಭೆಗಳನ್ನು ಪುರಸ್ಕರಿಸುವ, ಅಭಿನಂದಿಸುವ ಕಾರ್ಯಕ್ರಮಗಳು.

 

ಸರಕಾರದ ಸೌಲಭ್ಯಗಳನ್ನು ಸಮಾಜಸ್ಥರಿಗೆ ತಿಳಿಸಲು ಅವುಗಳ ಬಗ್ಗೆ ಅರಿವು ಮೂಡಿಸಲು ನಮ್ಮ ಕೂಟವು ʼಸರಕಾರಿ ಸೌಲಭ್ಯಗಳ ಕೈಪಿಡಿಯನ್ನುʼ ಹೊರತಂದಿದೆ. ಕೂಟದ ಸಮಾಜಸ್ಥರ ಉಪಯೋಗಕ್ಕಾಗಿ ವಿಸ್ತಾರವಾದ ನಿವೇಶನದ ಅಗತ್ಯವನ್ನು ಮನಗೊಂಡು ಅದಕ್ಕಾಗಿ ಎ.ಬಿ.ಸಿ (Asset building committee) ಸಮಿತಿಯನ್ನು ರಚಿಸಲಾಯಿತು. ಈ ಸಮಿತಿಯು ತನ್ನ ಕಾರ್ಯಸೂಚಿಯಂತೆ ಚಟುವಟಿಕೆಯಿಂದ ಕಾರ್ಯನಿರ್ವಹಿಸುತ್ತಿದೆ. ಆಧುನಿಕ ತಂತ್ರಜ್ಞಾನದ ಕೊಡುಗೆಯಾಗಿ ಕೂಟದ ವೆಬ್‌ಸೈಟನ್ನು ಅನಾವರಣ ಗೊಳಿಸಲಾಯಿತು. ಇದರಲ್ಲಿ ಕೂಟದ ಸವಿವರಗಳು, ಅಭಿವೃಧ್ದಿ ಚಟುವಟಿಕೆಗಳು ಮತ್ತಿತ್ತರ ಸಮಗ್ರ ವಿವರಗಳು ಲಭ್ಯವಾಗಿರುತ್ತವೆ.

 

ಹತ್ತಾರು ಸಮಾಜಮುಖಿ ಕಾರ್ಯಕ್ರಮಗಳನ್ನು ಪರಿಣಾಮಕಾರಿಯಾಗಿ ಸಮಾಜಸ್ಥರಿಗೆ ತಲುಪಿಸುವ ಕಾರ್ಯಕ್ರಮಕ್ಕೆ ಜೊತೆ ನೀಡುತ್ತಿರುವ ಯುವ ವೇದಿಕೆ ಹಾಗೂ ಮಹಿಳಾವೇದಿಕೆಗಳ ಕಾರ್ಯಚಟುವಟಿಕೆಗಳು ಅಭಿನಂದನೀಯ. ಕೋವಿಡ್‌ ಸಂಕಷ್ಟದ ಸಮಯದಲ್ಲಿ ಯುವ ವೇದಿಕೆಯು ಆಧುನಿಕ ತಂತ್ರಜ್ಞಾನದ ಮೂಲಕ ಅನೇಕ ಸಾಂಸ್ಕ್ರತಿಕ ಸ್ಪರ್ಧೆಗಳನ್ನು ಹಾಗೂ ವಿವಿಧ ಸಮಾಜಮುಖಿ ಕಾರ್ಯಕ್ರಮಗಳನ್ನು ಸಮಾಜಸ್ಥರಿಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

 

ಪರಿಸರ ಉಳಿಸಿ ಡಿಜಿಟಲ್‌ ಅಳವಡಿಸಿ ಅನ್ನುವ ಧ್ಯೇಯ ವಾಕ್ಯದೊಂದಿಗೆ ಸುತ್ತೋಲೆ, ವೃತ್ತಿಪರ ಸಂಹವನಗಳನ್ನು, ಇ-ಮೇಲ್‌, ವಾಟ್ಸಾಪ್‌ಗಳ ಮೂಲಕ ಕಳುಹಿಸುವ ವ್ಯವಸ್ಥೆಯನ್ನು ಮಾಡಿದ್ದು, ಎಲ್ಲಾ ಕೂಟದ ಸದಸ್ಯರುಗಳಿಗೂ ಕೂಟದ ಚಟುವಟಿಕೆಗಳನ್ನು ತಿಳಿಸಲು ಸಾಧ್ಯವಾಯಿತು. ಕೋವಿಡ್‌ ಲಾಕ್‌ ಡೌನ್‌ ಸಂದರ್ಭದಲ್ಲಿ ಝೂಮ್‌ ಮೀಟ್‌, ಗೂಗಲ್‌ ಮೀಟ್‌, ಜಿಯೊ ಮೀಟ್‌, ವಾಟ್ಸಾಪ್‌ ಗ್ರೂಪ್‌ ಗಳು ಮುಂತಾದ ತಂತ್ರಜ್ಞಾನದ ನೆರವಿನೊಂದಿಗೆ ಸಮಾಜ ಬಾಂಧವರ ಜೊತೆಗಿದ್ದು ಸಂಕಷ್ಟಕ್ಕೆ ಸಿಲುಕಿದವರ ಮನೆಮನೆಗೆ ತೆರಳಿ ಆಹಾರ ಸಾಮಗ್ರಿ ಹಾಗೂ ಹಣಕಾಸಿನ ನೆರವು ನೀಡಲು ಸಾಧ್ಯವಾಯಿತು. ಅಂತೆಯೇ ಇದೇ ತಂತ್ರಜ್ಞಾನಗಳ ನೆರವಿನಿಂದ ವಾರ್ಷಿಕ ಸಭೆಯನ್ನು, ಸಾಂಸ್ಕ್ರತಿಕ ಕಾರ್ಯಕ್ರಮಗಳನ್ನು ಜರಗಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು.

 

2015 ರಜತ ಮಹೋತ್ಸವ ವರ್ಷವಾಗಿದ್ದು ಅನೇಕ ಆಚರಣಾ ಕಾರ್ಯಕ್ರಮಗಳು ವರ್ಷವಿಡೀ ಜರುಗುವ ಮೂಲಕ ಕೂಟದ ಸದಸ್ಯರಲ್ಲಿ ಸಮಾಜಸ್ಥರಲ್ಲಿ ಚೈತನ್ಯವನ್ನು ಇಮ್ಮಡಿಗೊಳಿಸಿತು. ಈ ಕಾರ್ಯಕ್ರಮಗಳಿಗೆ ಊರು, ಪರವೂರು ಮಾತ್ರವಲ್ಲದೆ ದೇಶ ವಿದೇಶಗಳ ಬಂಧುಗಳು ತನು ಮನ ಧನ ಸಹಾಯ ಸಹಕಾರಗಳನ್ನು ನೀಡಿ ನಮ್ಮನ್ನು ಪ್ರೋತ್ಸಾಹಿಸಿದ್ದಾರೆ.

 

ಹೀಗೆ ನಮ್ಮ ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ, ಬೆಂಗಳೂರು ಅನೇಕ ರಚನಾತ್ಮಕ ಚಟುವಟಿಕೆಗಳೊಂದಿಗೆ ಉದ್ಧೇಶಿತ ಧ್ಯೇಯ ಧೋರಣೆಗಳನ್ನು ಊರ್ಜಿತಗೊಳಿಸಿ ಸಮಾಜ ಸೇವೆಯನ್ನು ಮಾಡಿಕೊಂಡು ಬರುತ್ತಿರುವುದು ನಮಗೆ ಸಂತಸವಾಗುತ್ತಿದೆ.

Logo.png

ದಕ್ಷಿಣ ಕನ್ನಡ ಪದ್ಮಶಾಲಿ ಸಮಾಜ ಸೇವಾ ಕೂಟ®, ಬೆಂಗಳೂರು

bottom of page